×

ನಮ್ಮ ಸೋಮಣ್ಣ


ಜನಸಾಮಾನ್ಯರ ಕಲ್ಯಾಣ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಜೀವನ ಮೀಸಲು. ಎಲ್ಲ ವರ್ಗದ ಜನರ ಆಶೀರ್ವಾದವೇ ನನಗೆ ಸ್ಫೂರ್ತಿ.

- ಶ್ರೀ ವಿ. ಸೋಮಣ್ಣ



ನಮ್ಮ ಸೋಮಣ್ಣ



ಪ್ರವಾಹ ಹಾಗೂ ಕೋವಿಡ್ ವಿರುದ್ಧ ಹೋರಾಡಿದ ವೀರಯೋಧ..

ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ವಿ. ಸೋಮಣ್ಣ ಅವರು ಮುಂಚೂಣಿಯಲ್ಲಿ ನಿಂತು ಕೈಗೊಂಡ ಕಾರ್ಯಗಳು ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿವೆ.

2019 ಮತ್ತು 2020ರಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ದಾಖಲೆಯ ಮಳೆಯಿಂದ ಭಾರೀ ಭೂಕುಸಿತಗಳು ಸಂಭವಿಸಿದವು. ನೂರಾರು ಕುಟುಂಬಗಳು ತಮ್ಮ ಮನೆಗಳನ್ನು ಕಳೆದುಕೊಂಡರೆ, ಅನೇಕರು ಪ್ರಾಣ ಕಳೆದುಕೊಂಡರು. ಪ್ರಕೃತಿಯ ರೌದ್ರಾವತಾರದ ಮುಂದೆ ಜನರು ಅಸಹಾಯಕರಾಗಿದ್ದರು. ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕರು ಹಾಗೂ ಅವರ ಕುಟುಂಬದ ಸದಸ್ಯರೂ ಭೂಕುಸಿತದಲ್ಲಿ ಸಾವನ್ನಪ್ಪಿದರು.

ಆ ಸಂದರ್ಭದಲ್ಲಿ ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ ಅವರು ರಕ್ಷಣಾ ಹಾಗೂ ಪರಿಹಾರ ಕಾರ್ಯಗಳ ನೇತೃತ್ವ ವಹಿಸಿ ಸಂಕಷ್ಟದಲ್ಲಿದ್ದ ಜನರ ನೆರವಿಗೆ ಧಾವಿಸಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿಯೊಂದಿಗೆ ಹೆಗಲಿಗೆ ಹೆಗಲು ನೀಡಿ ಕಾರ್ಯನಿರ್ವಹಿಸಿದ ಅವರು, ಭಾರೀ ಮಳೆ ಮತ್ತು ಗಾಳಿಯ ನಡುವೆಯೂ 10 ಕಿಲೋಮೀಟರ್‌ಗೂ ಹೆಚ್ಚು ದೂರ ಕಾಲ್ನಡಿಗೆಯಲ್ಲಿ ತೆರಳಿ ಸಿಬ್ಬಂದಿಗೆ ಧೈರ್ಯ ತುಂಬಿದರು. ಪುನರ್ವಸತಿ ಕಾರ್ಯದ ಭಾಗವಾಗಿ ಪ್ರವಾಹ ಹಾಗೂ ಭೂಕುಸಿತದಿಂದ ಸಂತ್ರಸ್ತರಾದ ಸುಮಾರು 700 ಕುಟುಂಬಗಳಿಗೆ ಮನೆಗಳನ್ನು ವಿತರಿಸಲಾಯಿತು.

ಅದೇ ರೀತಿ, ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ವಿ. ಸೋಮಣ್ಣ ಅವರ ತ್ವರಿತ ಸ್ಪಂದನೆ ಹಾಗೂ ನಿರಂತರ ಶ್ರಮವೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ನಂಜನಗೂಡಿನ ಜುಬಿಲೆಂಟ್ ಜೆನೆರಿಕ್ಸ್ ಲಿಮಿಟೆಡ್ ಸಂಸ್ಥೆಯ ನೂರಾರು ಕಾರ್ಮಿಕರಿಗೆ ಕೋವಿಡ್ ಸೋಂಕು ದೃಢಪಟ್ಟಾಗ, ಮೈಸೂರು ಜಿಲ್ಲೆ ಆತಂಕಕ್ಕೆ ಒಳಗಾಗಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ ಅವರು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದರು. ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಕಾರ್ಖಾನೆಯ 1,500ಕ್ಕೂ ಹೆಚ್ಚು ಕಾರ್ಮಿಕರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಯಿತು. ಲಾಕ್‌ಡೌನ್ ಅವಧಿಯಲ್ಲಿ ಅವರ ಕುಟುಂಬಗಳ ಅಗತ್ಯಗಳನ್ನೂ ಸಮರ್ಪಕವಾಗಿ ನೋಡಿಕೊಳ್ಳಲಾಯಿತು.

ಕಟ್ಟುನಿಟ್ಟಿನ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಮೈಸೂರು ಜಿಲ್ಲೆಯಲ್ಲಿ ಸೋಂಕಿನ ಹರಡುವಿಕೆಯನ್ನು ಯಶಸ್ವಿಯಾಗಿ ನಿಯಂತ್ರಿಸಲಾಯಿತು.





ಲಾಕ್‌ಡೌನ್ ಅವಧಿಯಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳನ್ನು ಪಡೆಯಲು ತೊಂದರೆ ಆಗುತ್ತಿರುವುದನ್ನು ಗಮನಿಸಿದ ವಿ. ಸೋಮಣ್ಣ ಅವರು ಮನೆ ಮನೆಗೆ ಪಡಿತರ ಧಾನ್ಯಗಳನ್ನು ತಲುಪಿಸುವ ವಿನೂತನ ಯೋಜನೆಯನ್ನು ಆರಂಭಿಸಿದರು. ಈ ಯೋಜನೆಯನ್ನು ಮೊದಲು ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಅದು ಯಶಸ್ವಿಯಾದ ಬಳಿಕ ರಾಜ್ಯದಾದ್ಯಂತ ವಿಸ್ತರಿಸಲಾಯಿತು.

ಬೆಂಗಳೂರು ಪೂರ್ವ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕೋವಿಡ್ ನಿರ್ವಹಣೆಯಲ್ಲಿ ವಿ. ಸೋಮಣ್ಣ ಅವರು ಮಾದರಿಯಾಗುವಂತಹ ಕಾರ್ಯವನ್ನು ನಿರ್ವಹಿಸಿದರು.

ಬೆಂಗಳೂರು ಪೂರ್ವ ವ್ಯಾಪ್ತಿಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳ 44 ವಾರ್ಡ್‌ಗಳು ಸೇರಿದ್ದರೆ, ಗೋವಿಂದರಾಜನಗರ ಕ್ಷೇತ್ರದಲ್ಲಿ 9 ವಾರ್ಡ್‌ಗಳು ಸೇರಿವೆ. ಒಟ್ಟು 53 ವಾರ್ಡ್‌ಗಳಲ್ಲಿ ಪರಿಣಾಮಕಾರಿ ಕೋವಿಡ್ ನಿರ್ವಹಣೆಯ ಮೂಲಕ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲಾಯಿತು.

ವೈದ್ಯಾಧಿಕಾರಿಗಳೊಂದಿಗೆ ನಿಯಮಿತ ಸಭೆಗಳು, ಜ್ವರ ಚಿಕಿತ್ಸಾ ಕೇಂದ್ರಗಳ (Fever Clinics) ಸ್ಥಾಪನೆ, ಕೋವಿಡ್ ಕೇರ್ ಸೆಂಟರ್‌ಗಳ ಆರಂಭ, ಸಹಾಯವಾಣಿ (Helpline), ವಾರ್ ರೂಮ್, ಮೊಬೈಲ್ ಕೋವಿಡ್ ಪರೀಕ್ಷಾ ವಾಹನಗಳ ವ್ಯವಸ್ಥೆ, ವೈದ್ಯಕೀಯ ಕಿಟ್‌ಗಳ ವಿತರಣೆ, ಸಂಪೂರ್ಣ ಕ್ಷೇತ್ರದ ಸ್ಯಾನಿಟೈಸೇಶನ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಮನೆ ಮನೆಗೆ ಭೇಟಿ, ಸೋಂಕಿತರಿಗೆ ಸಮಾಲೋಚನೆ ಸೇರಿದಂತೆ ಅನೇಕ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ಕೋವಿಡ್ ಸೋಂಕಿನ ಹರಡುವಿಕೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದರು.